Saturday, December 18, 2010

*** ‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ. ***




          ಹಾರ್ನ್ ಬಿಲ್ ಹಕ್ಕಿಗೆ ‘ನಶೆ’ ಏರುತ್ತದೆಯೇ?! ಆಗಾಗ ಏರುತ್ತದೆ! ಏರಿದ್ದು ಇಳಿಯುವವರೆಗೆ ಆಗಸಕ್ಕೆ ಲಗ್ಗೆ ಹಾಕಬಲ್ಲ ಈ ಕೌತುಕದ ಪಕ್ಷಿ ಭೂಮಿಗಿಳಿಯುತ್ತದೆ!

         ವನ್ಯಜೀವಿಗಳ ಖ್ಯಾತ ಛಾಯಾಗ್ರಾಹಕ ನರೇಂದ್ರ ಪಾಟೀಲ್ ಕವಳೇಶ್ವರ ಗುಡ್ಡದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೊಟೋ ಇದು. ಖ್ಯಾತ ಪರಿಸರಪ್ರೇಮಿಗಳಾದ ಪ್ರೊ. ಗಂಗಾಧರ ಕಲ್ಲೂರ ಹಾಗೂ ಪ್ರೊ. ಆಂಟೋನಿ ಅವರೊಂದಿಗೆ ಕವಳೇಶ್ವರ ಗುಡ್ದದಲ್ಲಿ ಚಾರಣ ಕೈಗೊಂಡಾಗ ‘ನಶೆ ಏರಿದ್ದ ರಿಂದ’ ಸುಸ್ತು ಹೊಡೆದು - ಬಳಲಿ, ನೆಲಕ್ಕೊರಗಿದ್ದ ಮಲಬಾರ್ ಪೈಡ್ ಹಾರ್ನ್ ಬಿಲ್ ಪಕ್ಷಿ ಕೈಗೆ ಸಿಕ್ಕಾಗ ತೆಗೆದ ಛಾಯಾಚಿತ್ರವದು. ಆಕಸ್ಮಿಕವಾಗಿ ಕೈಗೆ ಸಿಕ್ಕ, ನಿಸರ್ಗದ ಕೌತುಕವೊಂದರ ಆರೈಕೆಯಲ್ಲಿ ಅವರು ತೊಡಗಿದ ಮಾನವೀಯ ಕಳಕಳಿಯ ದೃಷ್ಯವಿದು.
ಮಲಬಾರ್ ಪೈಡ್ ಹಾರ್ನ್ ಬಿಲ್ (ಮಂಗಟ್ಟೆ ಹಕ್ಕಿ) ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂ ಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾನಗರಗಳಲ್ಲಿ ಕಾಡಿನ ಆರೋಗ್ಯ ಸೂಚಕ ಪಕ್ಷಿಯಾಗಿ ಗುರುತಿಸಲ್ಪಡುತ್ತದೆ. ಈ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಕಾಡು ಆರೋಗ್ಯಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹಾಗಾಗಿ ಕಾಡಿನ ಸಮತೋಲನ ತಪ್ಪಿ ಅನಾರೋಗ್ಯ ಅಪ್ಪಳಿಸಿದೆ ಎಂದು ಗಣಿಸಲಾಗುತ್ತದೆ.


          ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಗೆ ಹಿಂದಿ ಭಾಷೆಯಲ್ಲಿ ‘ಧನ್ ಛಿರಿ’, ಬಂಗಾಳಿಯಲ್ಲಿ ‘ಬಾಗ್ಮಾ ಧನೇಶ್’, ಓರಿಯಾದಲ್ಲಿ ‘ಕುಛಲಾ ಖಾ’, ಮರಾಠಿಯಲ್ಲಿ ‘ವಯೇರಾ’, ಕೊಂಕಣಿಯಲ್ಲಿ ‘ಕನಾರಿ’, ತಮಿಳಿನಲ್ಲಿ ‘ಇರಟ್ಟಾಯ್ ಛೋಂಡು ಕುರುವಿ’, ಮಲಯಾಳಿಯಲ್ಲಿ ‘ವೆಝಂಬಾಲ್’ ಎಂದು ಕರೆಯಲಾಗುತ್ತದೆ. ಅಂಜೂರ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲ ತರಹದ ಕಾಡಿನ ಹಣ್ಣಿನ ಮರಗಳಲ್ಲಿ ಗುಂಪು ಗೂಡಿ ಮಕ್ಕಳಂತೆ ಗಲಾಟೆ ಎಬ್ಬಿಸಿ ಹಣ್ಣುಗಳನ್ನು ಹೆಕ್ಕುವು ದು ನಯನ ಮನೋಹರ ದೃಶ್ಯ.


       ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಓತಿಕ್ಯಾತ, ಇಲಿ, ಮರಿ ಹೆಗ್ಗಣ ಮರಿ ಪಕ್ಷಿಗಳನ್ನು ಸಹ ಹಾರ್ನ್ ಬಿಲ್ ಕಬಳಿಸಬಲ್ಲುದು ಎನ್ನುತ್ತಾರೆ ಡಾ. ಸಲೀಂ ಅಲಿ. ಮಂಗಟ್ಟೆ ಹಕ್ಕಿ ಕೂಗಿದಾಗ ಕೇಕೆ ಹೊಡೆದು ನಕ್ಕ ಹಾಗೆ ಭಾಸವಾಗುತ್ತದೆ. ಮರದಿಂದ ಮರಕ್ಕೆ ಹಾರುವಾಗ ರೆಕ್ಕೆ ಬಡಿದು ತೇಲುವ ಅವುಗಳ ಕ್ಷಮತೆ ಹೆಲಿಕಾಪ್ಟರ್ ನೆನಪಿಸುವಂತಿರುತ್ತದೆ.


      ಮಲಬಾರ್ ಪೈಡ್ ಹಾರ್ನ್ ಬಿಲ್ ತಿನ್ನುವ ಹಣ್ಣುಗಳು ಅತ್ಯಂತ ಮಾಗಿದ್ದು, ಕಳೆತ ಹಾಗೂ ಇನ್ನೇನು ಕೊಳೆಯುವ ಸ್ಥಿತಿ ತಲುಪಿದ್ದರೆ; ಮತ್ತು, ಅದು ದೀರ್ಘ ಕಾಲದ ಉಪವಾಸದ ನಂತರ ಏಕಾಏಕಿ ಗರಿಷ್ಠ ಪ್ರಮಾಣದಲ್ಲಿ ಅಂತಹ ಕಳೆತ ಹಣ್ಣುಗಳನ್ನು ತಿಂದಾಗ ಆಯ ತಪ್ಪಿ ನೆಲಕ್ಕೊರ ಗುತ್ತದೆ. ಹಾಗೆ ತಲೆ ಸುತ್ತಿದಾಗ ಕೂಡಲೇ ಸುಧಾರಿಸಿಕೊಳ್ಳಲು ಅದಕ್ಕೆ ನೀರು ದೊರಕದೇ ಹೋದಾಗ ಹಕ್ಕಿಯ ಜಠರದಲ್ಲಿ ಕಳೆತ-ಕೊಳೆತ ಹಣ್ಣುಗಳ ‘Firmentation‘ ದಿಂದಾಗಿ ‘ಅಲ್ಕೋ ಹಾಲ್’ ಉತ್ಪತ್ತಿಯ ಪ್ರಮಾಣ ಹೆಚ್ಚಾಗಿ ಬವಳಿ ಬಂದಂತಾಗಿ ಬೃಹತ್ ದೇಹಿ ಧರಾಶಾಯಿ ಆಗುತ್ತ ದೆ ಎನ್ನುತ್ತಾರೆ ಪ್ರೊ. ಗಂಗಾಧರ ಕಲ್ಲೂರ.


      ಖುಷಿಯಿಂದ ಚಾರಣ ಪ್ರಿಯರೆಲ್ಲ ಈ ಮಂಗಟ್ಟೆಯನ್ನು ಕವಳೇಶ್ವರದ ಸಾವಿರ ಮೆಟ್ಟಿಲುಗಳ ಮೇಲೆ ಒಯ್ದು ಅಲ್ಲಿಂದ ರೆಕ್ಕೆ ಅಗಲಿಸಿ ಹಾರಿ ಬಿಟ್ಟರು. ಗೆಲುವಾಗಿದ್ದ ಹಾರ್ನ್ ಬಿಲ್ ತುಸು ದೂರ ಕೆಳ ಮಟ್ಟದಲ್ಲಿ ಹಾರಿ ನಂತರ ಆಗಸಕ್ಕೆ ಚಿಮ್ಮಿ ಹಾರಿತು!


       ರಣ ಹದ್ದಿನ ಗಾತ್ರದ ಈ ಹಕ್ಕಿಗೆ ಅಗಾಧವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವಂತೆ ಕೊಂಬು. ಕುತ್ತಿಗೆ ಹಾಗೂ ರೆಕ್ಕೆಗಳ ಬಣ್ಣ ಕಪ್ಪು. ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯ ಮೇಲೆ ಬಿಳಿ ಪಟ್ಟಿಗಳಿರುತ್ತವೆ. ಗಲ್ಲದ ಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಳಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಗಳು ಹಕ್ಕಿಯ ಸೌಂದರ್ಯಕ್ಕೆ ಕಿರೀಟವಿಟ್ಟಂತೆ ಭಾಸವಾಗುತ್ತದೆ. ರೆಕ್ಕೆಗಳ ಅಂಚಿನಲ್ಲಿರುವ ಬಿಳಿ ಪಟ್ಟಿಗಳು ಹಕ್ಕಿ ಹಾರಿದಾಗ ಸ್ಪಷ್ಟವಾಗಿ ಕಾಣುತ್ತವೆ. ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿ, ಕರ್ನಾಟಕದ ಮುಕುಟವಾಗಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಂಡುಬರುತ್ತವೆ. ಪರಿಸರ ಹಾನಿ, ಹಣ್ಣಿನ ಮರಗಳ ಕೊರತೆ ಹಾಗೂ ಶಿಕಾರಿಗಳ ದೆಸೆಯಿಂದ ಈ ದೊಡ್ಡ ಮಂಗಟ್ಟೆ ಹಕ್ಕಿಗಳು ವಿನಾಶದ ಅಂಚಿಗೆ ತಲುಪಿವೆ ಎನ್ನುತ್ತಾರೆ ತಜ್ಞರು.


         ಲಕ್ಷಾಂತರ ಸೂಕ್ಷ್ಮ ಕೊಂಡಿಗಳನ್ನು ತನ್ನೊಳಗೆ ಬೆಸೆದುಕೊಂಡಿರುವ ಸಂಕೀರ್ಣ ವ್ಯವಸ್ಥೆ ಅದು.) ವೃಕ್ಷಾರೋಪಣ ಕಾರ್ಯಕ್ರಮ ಮಾಡಿದೆವು. ಫಲವಾಗಿ ಕಾಡಿನ ಹಣ್ಣಿನ ಗಿಡಗಳು ಹೇಳಹೆಸರಿಲ್ಲ ದಂತಾದವು. ಹಾಗಾಗಿ ಬದುಕಲು ಅನಿವಾರ್ಯವಾಗಿ ಹಣ್ಣಿನ ಗಿಡಗಳನ್ನು ಅರಸಿಕೊಂಡು ನೂರಾರು ಕಿಲೋ ಮೀಟರ್ ಗಂಡು ಮಂಗಟ್ಟೆ ಹಕ್ಕಿ ಕ್ರಮಿಸಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ಇದು ಕಾಡಿಗೆ ತಗುಲಿರುವ ಅನಾರೋಗ್ಯದ ಸೂಚಕವಲ್ಲದೇ ಮತ್ತೇನು?"

         ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಯ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣು ಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಅತ್ಯಂತ ಎತ್ತರದಲ್ಲಿ ಪೊಟರೆ ಕೊರೆದು ತಾನು ಅದರೊಳಗೆ ಇಳಿಯುತ್ತದೆ. ಘೇಂಡಾಮೃಗದಂತೆ ಕೊಕ್ಕಿನ ಮೇಲೆ ದೊಡ್ಡ ಕೊಂಬಿರುವ ಕಾರಣ ಆ ಹದ್ದಿನ ಗಾತ್ರದ ಹಕ್ಕಿಗೆ ಇಡಿಯಾಗಿ ಆ ಬಿಲದೊಳಗೆ ತೂರಿಕೊಳ್ಳುವುದು ಸಾಧ್ಯವಾ ಗದ ಮಾತು. ಹಾಗಾಗಿ ಹೆಣ್ಣು ಮಂಗಟ್ಟೆ ಸಮರ್ಪಕವಾದ ಆಕಾರಕ್ಕೆ ಗೂಡನ್ನು ತರಲು ಗಂಡಿನ ಸಹಾಯದಲ್ಲಿ ಪೊಟರೆ ಕೊರೆಯುತ್ತ ಹೋಗುತ್ತದೆ. ಗೂಡು ಸಮರ್ಪಕವಾಗಿದೆ ಎನಿಸಿದಾಗ ಹೆಣ್ಣು ಮಂಗಟ್ಟೆ ಒಳಹೊಕ್ಕು ಕೇವಲ ಒಂದು ಮೊಟ್ಟೆ ಇಡುತ್ತದೆ. (ಕೆಲವೊಮ್ಮೆ ೨ ಮೊಟ್ಟೆಗಳನ್ನು ಸಹ ಇಟ್ಟ ಉದಾಹರಣೆಗಳಿವೆ; ನಾಲ್ಕು ಮೊಟ್ಟೆ ಇಟ್ಟ ದಾಖಲೆ ಸಹ ಇದೆ, ಆದರೆ ಮರಿ ಮಾತ್ರ ಒಂದು ಬದುಕಬಹುದು) ಮೊಟ್ಟೆಯ ಬಣ್ಣ ಬಿಳಿ ಹಾಗೂ ಕಟ್ಟಿಗೆ ಕಂದು ಬಣ್ಣ ಹೋಲುತ್ತದೆ.


            ಮೊಟ್ಟೆ ಇಟ್ಟ ತಕ್ಷಣ ಕೇವಲ ಕೊಕ್ಕು ಮಾತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿ ಯ ಜೊಲ್ಲು, ಗಿಡದ ರಾಳ ಹಾಗೂ ಅಂಟು ಬಳಸಿ ಇಡೀ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಬಿಡುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗು ತ್ತದೆ. ಇತ್ತ ಪೊಟರೆಯೊಳಗೆ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತ, ತನಗೆ ಹಾಗೂ ಮೊಟ್ಟೆ ಒಡೆದು ಜೀವ ತಳೆಯಲಿರುವ ಮರಿಗೆ ಜಾಗೆ ಸಾಲದು ಎಂಬ ಕಾರಣಕ್ಕೆ ತನ್ನೆಲ್ಲ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹಾರಲಾಗದ ಸ್ಥಿತಿಗೆ ತಲುಪುತ್ತದೆ.




              ಹಾಗೆಯೇ, ಚಿಕ್ಕ ಗರಿಗಳನ್ನು ಬಳಸಿ ತನ್ನ ಮರಿಗೆ ಪೊಟರೆಯ ಒಳಗೆ ‘ಬೆಡ್’ಸಹ ನಿರ್ಮಾಣ ಮಾಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬಂದು ಹಾರುವ ಸ್ಥಿತಿ ತಲುಪುವ ವೇಳೆಗೆ ತಾಯಿ ಹಕ್ಕಿ ಸಹ ತನ್ನ ರೆಕ್ಕೆಯ ಗರಿಗಳನ್ನು ಮರಳಿ ಪಡೆದುಕೊಂಡಿರುತ್ತದೆ. ಈ ಮಧ್ಯೆ, ಗಂಡು ಹಕ್ಕಿ ತನ್ನ ಕೊಕ್ಕಿನಲ್ಲಿ ನೀರನ್ನು ಹಿಡಿದು ತರಲು ಸಾಧ್ಯವಾಗದ್ದರಿಂದ ನೀರಿನ ಅಂಶ ಹೇರಳವಾಗಿರುವ ಹಣ್ಣುಗಳನ್ನೇ ಹುಡುಕಿ ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ತಂದು ತಾಯಿ ಹಾಗೂ ಮರಿ ಹಕ್ಕಿಗೆ ಉಣಬಡಿಸುತ್ತದೆ. ಸಮಯ ಸಿಕ್ಕಾಗ ತಾನೂ ತನ್ನ ಉದರಂಭರಣ ಮಾಡಿಕೊಳ್ಳುತ್ತದೆ. ಕೆಲ ವೊಮ್ಮೆ ತಾನು ಉಪವಾಸ ಉಳಿದು ತನ್ನವರಿಗಾಗಿ ಹಣ್ಣನ್ನು ಸಹ ಹೆಕ್ಕಿತರುತ್ತದೆ ಗಂಡು ಮಲ ಬಾರ್ ಪೈಡ್ ಹಾರ್ನ್ ಬಿಲ್!

        ಇತ್ತ ಗೂಡಿನಲ್ಲಿ ಹಾರಲಾಗದ ಸ್ಥಿತಿಯಲ್ಲಿ ಬಂಧಿಯಾದ ಹೆಣ್ಣು ಮಂಗಟ್ಟೆಗೆ ಬೇಟೆಗಾರರ ಕಾಟ ಸಹ ಇಲ್ಲವೆಂದಲ್ಲ. ಕಾಡು ಬೋಳಾಗಿ ಕೆಲವೇ ಎತ್ತರದ ಮರಗಳು ಉಳಿದಿರುವ ‘ಹೆಸರಿಗೆ ಕಾಡು’ಗಳಲ್ಲಿ ಬೇಟೆಗಾರರ ಹದ್ದಿನ ಕಣ್ಣುಗಳಿಗೆ ಎತ್ತರದ ಮರದ ಮೇಲೆ ಪೊಟರೆಯೊಳಗಿಂದ ತನ್ನ ದೊಡ್ಡ ಕೊಂಬನ್ನು ಹೊರ ಚಾಚಿ ಕುಳಿತ ತಾಯಿ ಹಕ್ಕಿಯನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಸಹಜವಾಗಿ ಬೇಟೆಗಾರರ ಬಲಿಗೆ ಆಹುತಿಯಾಗುವ ಹೆಣ್ಣು ಹಕ್ಕಿ, ಅದರ ಮರಿ ಅಥವಾ ಮೊಟ್ಟೆ, ಗಂಡು ಹಕ್ಕಿಯನ್ನು ಜೀವನಪರ್ಯಂತ ಏಕಾಂಗಿ ಆಗಿಸಿಬಿಡುತ್ತದೆ.



***ಸಂಗ್ರಹ***

***ಹೀಗೊಂದು ಕಥೆ***

ಪ್ರಿಯ ಗೆಳೆಯರೇ,...........

ಕಷ್ಟದ ಕೋಟೆಯೊಳಗೆ ಬಾಲ್ಯವನ್ನು ಸವೆಸಿದ ರಝೂಕ್ ಬೆಳೆದದ್ದು ನರಸಿಂಹಪುರದಲ್ಲಿ. ಹಣದ ಕೊರತೆಯಿಂದ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಊರಿನ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಸುಮಾರು ನಾಲ್ಕು ವರ್ಷ ಕೆಲಸ ಮಾಡಿ ದುಡಿದು ಸಂಗ್ರಹಿಸಿದ ಅಲ್ಪ ಸ್ವಲ್ಪ ಹಣದಲ್ಲಿ ತಾನು ಸ್ವಾವಲಂಬಿಯಾಗಬೇಕೆಂಬ ಉತ್ಕಟ ಅಭಿಲಾಷೆಯಿ೦ದ ರಝಾಕ್ ಸ್ವಂತ ದಿನಸಿ ಅಂಗಡಿಯೊಂದನ್ನು ತೆರೆದು ಹೊಸ ದುಡಿಮೆಯ ಮೂಲಕ ಹೊಸ ಬದುಕನ್ನು ಕಂಡವರು. ಹೆತ್ತವರನ್ನು, ಅಣ್ಣಂದಿರನ್ನು, ತಂಗಿಯಂದಿರನ್ನು ತನ್ನ ಸಂಸಾರದ ಬಂಡಿಯಲ್ಲೇ ಹೊತ್ತೊಯ್ದು ಮಾದರಿ ಜೀವನ ಸಾಗಿಸಿದವರು. ರಝಾಕ್‌ರಿಗೆ ಸುಮಯ್ಯ ಅರ್ಧಾಂಗಿನಿಯಾಗಿ ಸಾಥ್ ನೀಡಿದರು. ತುಂಬಿದ ಮನೆಯಲ್ಲಿ ಅಮೀರ್ ಮತ್ತು ಝಲೈಖಾ ಎಂಬ ಹೆಸರಿನ ಇಬ್ಬರು ಮಕ್ಕಳು ಹುಟ್ಟಿ ಬಂದರು. ಮನೆ ನಂದನವಾಯಿತು. ಮಕ್ಕಳಿಗೆ ಪದೇ ಪದೇ ತಾವು ಬೆಳೆದು ಬಂದ ರೀತಿಯನ್ನು ಹೇಳುತ್ತಾ, ಸ್ವಾವಲಂಬಿಯಾಗಿ ಬಾಳಲು ಪ್ರೇರೇಪಿಸುತ್ತಿದ್ದರು ರಝಾಕ್.

ಒಳ್ಳೆಯ ಪರಿಸರದಲ್ಲೇ ಬೆಳೆದ ಅಮೀರ್, ಕಾಲೇಜು ಶಿಕ್ಷಣ ಮುಗಿಸಿ ಅಧ್ಯಾಪಕ ವೃತ್ತಿಗೆ ಸೇರಿಕೊಂಡ. ಊರಿನಲ್ಲಿ ರಝಾಕ್‌ರ ಕುಟುಂಬಕ್ಕೆ ವಿಶೇಷ ಮರ್ಯಾದೆಯೂ ಇತ್ತು. ಎಲ್ಲರೂ "ಅಮೀರ್ ಸಾರ್" ಎಂದು ಕರೆಯುವಾಗ ರಝಾಕ್ ಸಾಹೇಬರಿಗೆ ಎಲ್ಲಿಲ್ಲದ ಖುಷಿ. ಒಳಗೊಳಗೆ ಮಗನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಇತ್ತು ಝುಲೈಖಾಳಿಗೂ ಒಳ್ಳೆಯ ಸಂಬಂಧ ಕೂಡಿ ಬಂತು. ಝುಲೈಖಾ ಪತಿಯ ಮನೆ ಸೇರಿದಳು. ಇನ್ನು ಅಮೀರ್ ನ ಮದುವೆ ಮಾತ್ರ ಉಳಿದಿರುವುದು.

ಮನೆಯವರೆಲ್ಲರೂ ಅಮೀರ್ ನ ಮದುವೆಯ ಕುರಿತು ಆಲೋಚಿಸುತ್ತಿದ್ದರು. ಅಮೀರ್‌ಗೆ ಪಕ್ಕದ ಊರಿಗೆ ವರ್ಗಾವಣೆಯೂ ಆಯಿತು. ವಾರಕ್ಕೊಮ್ಮೆ ಮನೆಗೆ ಬರಲು ಮಾತ್ರ ಸಾಧ್ಯವಾಗುತ್ತಿತ್ತು. ರಝಾಕ್, ಸುಮಯ್ಯಾರಿಗೆ ಮೊದಲು ಅಮೀರ್ ನನ್ನು ಬಿಟ್ಟಿರಲು ಸಾಧ್ಯವಾಗದಿದ್ದರೂ ವಾರಕ್ಕೊಮ್ಮೆಯಾದರೂ ಮಗನ ಮುಖ ನೋಡಿ ಸಂತೋಷ ಪಡುತ್ತಿದ್ದರು.

ಹೀಗೆ ಒಂದು ದಿನ...........
ಚಿಕನ್ ಸ್ಟಾಲ್‌ನ ಅಬ್ದುಲ್ಲಾ ತನ್ನ ಕಡೆಗೆ ಓಡೋಡಿ ಬರುತ್ತಿರುವುದನ್ನು ಕಂಡು ರಝಾಕ್‌ರಿಗೆ ಗಾಬರಿಯಾಯಿತು. ಏನೂ ಮಾತನಾಡದೆ ಒಂದೇ ಸಮನೆ ಉಸಿರು ಬಿಡುತ್ತಿದ್ದರು. ರಝಾಕ್‌ರಿಗೆ ಏನೆಂದೇ ತೋಚಲಿಲ್ಲ.
"ಬನ್ನಿ ನನ್ನ ಜೊತೆ, ನಿಮ್ಮ ಮಗನಿಗೆ ಏನೂ ಆಗಿಲ್ಲ" ಎಂದು ಒಗೊಟೊಗಟಾಗಿ ಮಾತನಾಡಿದರು.
ರಝಾಕ್‌ರ ಮನದಲ್ಲಿ ಏನೆಲ್ಲಾ ಚಿಂತೆಗಳು ಶುರುವಾದವು.

 ಚಿಕ್ಕ ಮಗುವಿನಂತೆ ಅಬ್ದುಲ್ಲಾರನ್ನೇ ಹಿಂಬಾಲಿಸಿದರು. ಹೀಗೆ ಅಬ್ದುಲ್ಲಾ ಕರೆದುಕೊಂಡು ಹೋದದ್ದು ದೊಡ್ಡದೊಂದು ಆಸ್ಪತ್ರೆಗೆ. ಅಲ್ಲಿ ಶಾಲೆಯ ಮಕ್ಕಳೂ ಇದ್ದಾರೆ, ಕೆಲವು ಮಂದಿ ಅಧ್ಯಾಪಕರೂ ಇದ್ದಾರೆ. ಆದರೆ ಮಗ ಅಮೀರ್ ಕಾಣುತ್ತಿಲ್ಲ.
"ಏನಾಯಿತು ನನ್ನ ಮಗನಿಗೆ? ಏನಾಯಿತು ನನ್ನ ಮಗನಿಗೆ?" ಎಂದು ರಝಾಕ್ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದರು.
"ಏನೂ ಆಗಿಲ್ಲ, ರೈಲು ಹಳಿ ದಾಟುವಾಗ ಅಪಘಾತವಾಗಿ ಕಾಲಿಗೆ ಗಾಯವಾಗಿದೆ ಅಷ್ಟೇ" ಎಂದು ಯಾರೋ ಒಬ್ಬರು ಸಮಾಧಾನಿಸಿದರು.
ಇದನ್ನು ಕೇಳಿ ರಝಾಕ್ ಸಾಹೇಬರು ಮೂರ್ಛೆ ತಪ್ಪಿ ಬಿದ್ದುಬಿಟ್ಟರು.

ಅಮೀರ್‌ನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಮೀರ್ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾನೆ. ಯಾವುದೇ ಗಾಯದ ಗುರುತುಗಳಿಲ್ಲ. ಕಾಲಿಗೆ ಹೊದಿಸಲಾಗಿದ್ದ ಬಟ್ಟೆಯನ್ನು ಸರಿಸಿದರು ಸುಮಯ್ಯಾ.
"ಯಾ ಅಲ್ಲಾಹ್!"
ಮಗನ ಕಾಲನ್ನು ಕತ್ತರಿಸಲಾಗಿತ್ತು. ಒಂದು ಕಾಲನ್ನು ಕಳೆದುಕೊಂಡಿದ್ದರೂ ನಗು ಮುಖ ಬೀರುತ್ತಿದ್ದ ಅಮೀರ್‌ನನ್ನು ಕಂಡು ಹೆತ್ತ ಕರುಳು ಚುರುಗುಟ್ಟಿತು.
ಅಮೀರ್‌ನನ್ನು ಆಂಬುಲೆನ್ಸ್‌ನಲ್ಲೇ ಮನೆಗೆ ಕರೆ ತರಲಾಯಿತು. ಅಪ್ಪ, ಅಮ್ಮ, ಅಣ್ಣಂದಿರು, ತಂಗಿಯಂದಿರು ಅಮೀರ್‌ನಿಗೆ ಸಾಥ್ ನೀಡುತ್ತಿದ್ದಾರೆ. ಅತ್ತಿತ್ತ ಹೋಗಲು ತುಂಬಿದ ಮನೆಯಲ್ಲಿ ಸಾಕಷ್ಟು ಮಂದಿ ಹೆಗಲು ನೀಡುತ್ತಿದ್ದರು. ಅಮೀರ್ ಸಾರ್‌ರನ್ನು ನೋಡಲು ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಬರುತ್ತಿದ್ದರು.
*********************************
ವರ್ಷವೊಂದು ಕಳೆಯಿತು.  ಅಮೀರ್ ಗೆ ಕೃತಕ ಕಾಲಿನ ಆಸರೆ ನೀಡಲಾಯಿತು. ಅಮೀರ್ ಎದ್ದು ಮತ್ತೆ ಚಲಿಸತೊಡಗಿದ. ಹೆತ್ತ ಕರುಳಿಗೆ ಮಗನ ಯಾತನೆ ಅರ್ಥವಾಗುತ್ತಿತ್ತು. ಮದುವೆ ವಿಚಾರ ಮತ್ತೆ ಚರ್ಚೆಯಾಗತೊಡಗಿತು. ಅಮೀರ್  ನಿಗೆ ಚಂದದೊಂದು ಹೆಣ್ಣನ್ನು ನೋಡಿ ಮದುವೆ ಮಾಡಬೇಕು ಎಂದು ಅಜ್ಜ - ಅಜ್ಜಿ ಮಾತನಾಡತೊಡಗಿದರು. ಆದರೇನಂತೆ! ಒಂದು ಕಾಲನ್ನು ಕಳೆದುಕೊಂಡಿರುವ ಅಮೀರ್‌ಗೆ ಯಾರು ಹೆಣ್ಣು ನೀಡುತ್ತಾರೆ? ಎಂದು ಸುಮಯ್ಯಾ ಚಿಂತಿಸತೊಡಗಿದರು.
ಹಲವು ಕಡೆ ಹೆಣ್ಣು ನೋಡಲಾಯಿತು. ಅಮೀರ್ ನ ವೃತ್ತಿ, ಸೌಂದರ್ಯ, ವಿದ್ಯಾಭ್ಯಾಸ ಗೆದ್ದರೂ ಕುಂಟುತನ ಸೋಲುತ್ತಿತ್ತು. ಈ ಹಿಂದೆ ಅಮೀರ್‌ನಿಗೆ ಹೆಣ್ಣು ನೀಡಲು ಮುಂದೆ ಬಂದಿದ್ದವರು ಈಗ ತಲೆಮರೆಸಿಕೊಂಡಿದ್ದರು. ಆ ದೇವ ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಅದೇ ನಡೆಯುತ್ತದೆ ಎಂಬುದಾಗಿತ್ತು ಅಮೀರ್ ನ ಅಚಲ ನಿಲುವು.
ದೂರದಿಂದ ಸಂಬಂಧವೊಂದು ಕೂಡಿ ಬಂತು. ಅದು ಅಮೀರ್ ಶಿಕ್ಷಕನಾಗಿ ವೃತ್ತಿ ಮಾಡುತ್ತಿದ್ದ ಊರಿನಿಂದ ಬಂದ ಸಂಬಂಧವಾಗಿತ್ತು. ಹೆಸರು ಆಯಿಶಾ. ರಹೀಮ್ - ನಸೀಮಾ ದಂಪತಿಯ ಏಕೈಕ ಮಗಳು. ಸೌಂದರ್ಯ, ಶ್ರೀಮಂತಿಕೆ, ಗುಣ ಇವು ಯಾವುದರಲ್ಲೂ ಕೊರತೆಯಿರಲಿಲ್ಲ. ಆದರೆ ಅಮೀರ್ ನನ್ನು ನೋಡಿದ್ದೇ ತಡ, ಆಯಿಶಾ ಒಪ್ಪಿಕೊಂಡಳು, ಮಗಳ ಒಪ್ಪಿಗೆಗೆ ರಹೀಮ್ - ನಸೀಮಾ ತಲೆಯಾಡಿಸಿದರು. ಅಮೀರ್‌ನ ಕುಂಟುತನ ಆಯಿಶಾಳೆದುರು ಪರಿಗಣನೆಗೆ ಬರಲಿಲ್ಲ.
ಆಯಿಶಾಳ ಗೆಳತಿಯರು ಆಗಾಗ ಫೋನು ಮಾಡುತ್ತಿದ್ದರು.
"ಅಮೀರ್‌ನಿಗೆ ಒಂದು ಕಾಲು ಸರಿಯಿಲ್ಲ. ನೀನೇಕೆ ಅವನನ್ನು ಒಪ್ಪಿಕೊಂಡೆ?" ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ಆದರೆ ಆಯಿಶಾ ಏನೂ ಮಾತನಾಡಲಿಲ್ಲ. ಆಕೆಯ ಮೌನವೇ ಉತ್ತರವಾಗಿತ್ತು.
ಗೆಳತಿಯರ ಫೋನು ಅತಿಯಾಗತೊಡಗಿತು. ಆಯಿಶಾಳ ಮೌನವೂ ಮುರಿಯಿತು.
"ನಾನು ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿರುವೆ. ಅಮೀರ್ ಕುಂಟನಾದರೂ, ಕುರುಡನಾದರೂ ನಾನು ಅವರನ್ನೇ ಮದುವೆಯಾಗುವೆ. ಇದು ನನ್ನ ಜೀವನದ ವಿಚಾರ. ಯಾರೂ ಇದರಲ್ಲಿ ಮೂಗು ತೂರಿಸಬೇಡಿ" ಎಂದು ಖಾರವಾಗಿ ಪ್ರತಿಕ್ರಿಯಿಸಿದಳು.

ಅಮೀರ್ - ಆಯಿಶಾಳ ಮದುವೆ ಸಂಭ್ರಮದಿಂದ ನಡೆಯಿತು. ತುಂಬಿದ ಮನೆ ಮತ್ತೆ ಕುಣಿದಾಡಿತು. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಮೀರ್ - ಆಯಿಶಾ ಜೋಡಿಗೆ ಎಲ್ಲರೂ ಶುಭ ಹಾರೈಸಿದರು.
"ಯಾ ಅಲ್ಲಾಹ್! ಇವರ ದಾಂಪತ್ಯ ಬದುಕು ಕೋಪ, ಮತ್ಸರ, ಅಸೂಯೆಗಳಿಂದ ಮುಕ್ತವಾಗಿರಲಿ, ಹರಿದಾಡುವ ನೀರಿನಂತೆ ಶುಭ್ರವಾಗಿರಲಿ" ಎಂದು ಬೇಡುತ್ತಿದ್ದರು ಹಿರಿಯರು.

ಅಮೀರ್ - ಆಯಿಶಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು.
"ನಿಮ್ಮ ಕಾಲಿಗೇನಾಯಿತು?" ಆಯಿಶಾ ಪ್ರಶ್ನಿಸಿದಳು.

ಅದುವರೆಗೆ ಈ ಪ್ರಶ್ನೆಯನ್ನು ಕೇಳಿ ಎಲ್ಲರೂ ಸೋತಿದ್ದರು. ಅಮೀರ್ ಆ ರಹಸ್ಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ತನ್ನನ್ನು ತನ್ನ ಕುಂಟುತನವನ್ನು ಒಪ್ಪಿಕೊಂಡು ಬಂದಿರುವ ಆಯಿಶಾಳಿಗೆ ರಹಸ್ಯವನ್ನು ಹೇಳಲೇಬೇಕೆನಿಸಿತು.

"ಅಂದು ನಾನು ಎಂದಿನಂತೆ ವೃತ್ತಿ ಮುಗಿಸಿ ಶಾಲೆಯಿಂದ ಮರಳುತ್ತಿದ್ದಾಗ ರೈಲು ಹಳಿಯಲ್ಲಿ ಇಬ್ಬರು ಯುವತಿಯರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರದಲ್ಲೇ ರೈಲು ಬರುತ್ತಿದ್ದರೂ ಅವರಿಗೆ ಅದು ಗೊತ್ತೇ ಆಗಲಿಲ್ಲ. ಅವರು ನಡೆದುಕೊಂಡು ಹೋಗುತ್ತಿದ್ದ ಹಳಿಯಲ್ಲೇ ಆ ರೈಲು ಬರುತ್ತಿತ್ತು. ನಾನು ಒಂದೇ ಸಮನೆ ಓಡಿ ಹೋಗಿ ಅವರನ್ನು ಬದಿಗೆ ಸರಿಸಿದೆ. ಎಚ್ಚೆತ್ತು ನೋಡುವುದರಲ್ಲಿ ನಾನು ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದೆ. ನನ್ನ ಒಂದು ಕಾಲು ರೈಲಿನಡಿಗೆ ಸಿಲುಕಿ ಕಳೆದುಕೊಂಡ ವಿಚಾರ ಗೊತ್ತಾಯಿತು. ಆ ಹುಡುಗಿಯರು ಅಪಾಯದಿಂದ ಪಾರಾಗಿದ್ದರು ಎಂಬ ವಿಚಾರ ತಿಳಿದು ನಾನು ನನ್ನ ನೋವನ್ನೇ ಮರೆತುಬಿಟ್ಟೆ" ಎನ್ನುತ್ತಿರುವಾಗ,
ಆಯಿಶಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

ಅಮೀರ್ ಆಕೆಯ ಅಳುವನ್ನು ನೋಡಿ ಆಶ್ಚರ್ಯಚಕಿತನಾದ.
"ನೀನು ಯಾಕೆ ಅಳುತ್ತಿರುವೆ?" ಎಂದು ಪ್ರಶ್ನಿಸಿದ.
"ನೀವು ರಕ್ಷಿಸಿದ ಹೆಣ್ಣು ಬೇರಾರೂ ಅಲ್ಲ, ನಾನೇ" ಎಂದಾಗ ಅಮೀರ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಮೀರ್ ನಿಗೆ ಕಳೆದುಕೊಂಡ ಕಾಲು ಮತ್ತೆ ದೊರೆತಂತಾಯಿತು.



*** ಸಂಗ್ರಹ ***